Wednesday, July 11, 2012

ದಿನಕ್ಕೊಂದು ನನ್ನದೊಂದು ಮಾತು - ಮೂರು 


'ಇಲ್ಲಿ ಸ್ವರ್ಣ ಪ್ರಾಷನ ಮಾಡಿಸಲಾಗುತ್ತದೆ.'

ಈ ಹಣೆಬರಹ ಹೊತ್ತ ಬ್ಯಾನರ್ ಮಹಾಲಕ್ಷ್ಮಿ ಲೇಔಟ್  ಅಂಗಡಿಯೊಂದರ ಮುಂದೆ ತೂಗುತ್ತಿತ್ತು. 'ಐದು ವರ್ಷದೊಳಗಿನ ಮಕ್ಕಳಿಗೆ ಪ್ರತಿ ತಿಂಗಳ ಪುಷ್ಯ ನಕ್ಷತ್ರದ ದಿನದಂದು' ಎಂಬ ಅಡಿಬರಹವೂ ಇತ್ತು.ಅದು ಆಯುರ್ವೇದ ಪಂಡಿತರೊಬ್ಬರ ಅಂಗಡಿಯೆಂಬುದು ನನ್ನ ಗಮನಕ್ಕೆ ಬಂತು. ಕುತೂಹಲ ಹೆಚ್ಚಾಗಿ ಮನೆ ತಲುಪಿದ ನಂತರ ಅಂತರ್ಜಾಲ ಹೊಕ್ಕು, ದೊರೆತ ಮಾಹಿತಿ ಓದಿದಾಗ,  ಆಯುರ್ವೇದದ ವಿಸ್ತಾರದ ಬಗ್ಗೆ ನನ್ನಲ್ಲಿ ಅಚ್ಚರಿ ಮೂಡಿಸಿತು.

ಆಯುರ್ವೇದದ ಪ್ರಕಾರ 'ಸ್ವರ್ಣ ಪ್ರಾಷನ' ಅಥವಾ 'ಸ್ವರ್ಣ ಬಿಂದು ಪ್ರಾಷನ' ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಸುಧಾರಿಸಿ ಮೆದುಳಿನ ಸಾಮರ್ಥ್ಯವೂ ಹೆಚ್ಚುತ್ತದೆ. ಇದು ಮೂರು ಅಂಶಗಳ ಮಿಶ್ರಣ - ಶುದ್ಧ ಮಧು, ಶುದ್ಧ ಸ್ವರ್ಣ ಭಸ್ಮ, ಔಷಧೀಯ  ಗಿಡಮೂಲಿಕೆಗಳಿಂದ ಪುಷ್ಠಿಕರವಾದ ತುಪ್ಪ/ ಘೃತ.
  • ಅಲ್ಪ ಪ್ರಮಾಣದಲ್ಲಿ ಶುದ್ಧ ಮಧು ಅಲೆರ್ಜಿ ಉಂಟುಮಾಡುವ ಅಲೆರ್ಜೆನ್ಸ್ ವಿರುದ್ಧ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ  
  • ಘೃತಕ್ಕೆ ಒಂದು ವಿಶಿಷ್ಟವಾದ ಗುಣಲಕ್ಷಣವಿದೆ - ಔಷಧೀಯ ಗಿಡಮೂಲಿಕೆಗಳ ಜೊತೆ ಬೆರೆತಾಗ ಅದರ ಗುಣಗಳನ್ನು ತನ್ನದಾಗಿಸಿಕೊಳ್ಳುತ್ತದೆ
  • ಶುದ್ಧ ಸ್ವರ್ಣ ಭಸ್ಮ - ಸುವರ್ಣ ಭಸ್ಮ ರೂಪದಲ್ಲಿ ಲಘು ಗುಣಾತ್ಮಕ ( ಸತ್ವ ಹೀರಿಕೊಳ್ಳುವುದು ಹಾಗು ಅರಗಿಸಿಕೊಳ್ಳುವುದು ), ಮೇಧಾ ವರ್ಧಕ ( ಜ್ಞಾಪಕ ಶಕ್ತಿ )
ಸ್ವರ್ಣ ಪ್ರಾಷನದ ಉಲ್ಲೇಖ ಕಾಶ್ಯಪ ಸಂಹಿತದಲ್ಲಿದೆ. 'ಸ್ವರ್ಣ ಪ್ರಾಷನದಿಂದ ಶಿಶುವಿನ ಮೇಧ ( ಬುದ್ಧಿ ಶಕ್ತಿ ), ಅಗ್ನಿ(ಜೀರ್ಣ ಶಕ್ತಿ ), ಆಯು ವರ್ಧನ ( ಆಯುಷ್ಯ ಹೆಚ್ಚುವಿಕೆ ), ಮಂಗಳಕರ ( ಗುಣಾತ್ಮಕ ಭಾವನೆಗಳು ), ವೃಶ್ಯ ( ಆಕರ್ಷಕ ವ್ಯಕ್ತಿತ್ವ ), ವರ್ಣ್ಯ (ಕಾಂತಿಯುಕ್ತ ದೇಹ), ಗೃಹ ಬಾಧಾನಾಷಕ ( ದುಷ್ಟ ಶಕ್ತಿಗಳಿಂದ ದೂರ ) ಗುಣಗಳು ಅಭಿವೃದ್ಧಿ ಹೊಂದುತ್ತದೆ. ಸ್ವರ್ಣ ಪ್ರಾಷನವನ್ನು 30 ಬಾರಿ ಮಾಡಿಸಿದಲ್ಲಿ ಶಿಶುವು ಪರಮ ಮೇಧಾವಿ ಹಾಗು ಯಾವುದೇ ವ್ಯಾಧಿಗಳಿಗೆ ತುತ್ತಗುವುದಿಲ್ಲ; 180 ಬಾರಿ ಮಾಡಿಸಿದಲ್ಲಿ ಶ್ರುತಾಧಾರನಾಗುತ್ತಾನೆ/ಳೆ ( ಕೇಳಿದ್ದನ್ನು ನೆನಪಿನಲ್ಲಿ ಉಳಿಯುವ , ಉತ್ತಮ ಗ್ರಹಿಕಾ ಸಾಮರ್ಥ್ಯ )'

ಕಾಶ್ಯಪ ಮುನಿ ರಚಿತ 'ಕಾಶ್ಯಪ ಸಂಹಿತ' ಇಂತಹ ಅನೇಕ ಪ್ರಾಚೀನ ಅಥವಾ ಪುರಾತನ ಮಾಹಿತಿಗಳ ಸಂಕಲನವಾಗಿದೆ. 

No comments:

Post a Comment